ಬದುಕಿನ ಅನಾವರಣದ "ಬೊಗಸೆಯಲ್ಲಿ ಮಳೆ"


ಮೊದಲಿನಿಂದಲೂ ಜಯಂತ ಕಾಯ್ಕಿಣಿ ಎಂದರೇ ಅದೆಂತಹದೋ ಮೋಹ. ಪುಸ್ತಕದಂಗಡಿಗೆ ಹೋದಾಗಲೆಲ್ಲ ನನ್ನ ಕಂಗಳು ಕಾಯ್ಕಿಣಿ ಪುಸ್ತಕಗಳನ್ನು ಹುಡುಕುತ್ತವೆ. ಅವರ ಪುಸ್ತಕಗಳು ನನ್ನ ಹತ್ತಿರ ಇದ್ದರೂ ಕೂಡ, ಅವರ ಪುಸ್ತಕವನ್ನು ಕೈಗೆತ್ತಿಕೊಂಡು ಮುಖಪುಟವನ್ನು ಸವರಿ , ಒಂದೆರಡು ಪುಟಗಳ ಮೇಲೆ ಕೈಯಾಡಿಸಿದರೆ ಸಮಾಧಾನ.

ಅವರ ಪುಸ್ತಕಗಳೆಂದರೆ ಅದೆಂಥಹದೋ ಅಚ್ಚರಿ,‌ಬೆರಗು, ಕುತೂಹಲ, ಅವರು ಜಗವನ್ನು ನೋಡುವ ರೀತಿ, ಬಳಸುವ ಶಬ್ಧ, ರೂಪಕಗಳು ಸದಾ ನನಗೆ‌ ಅಚ್ಚರಿಗೆ ದೂಡುತ್ತವೆ.

ಇತ್ತೀಚೆಗೆ ಓದಿದ ಕಾಯ್ಕಿಣಿ ಅವರ ಅಂಕಣ ಬರಹಗಳ ಸಂಗ್ರಹವಾದ "ಬೊಗಸೆಯಲ್ಲಿ ಮಳೆ" ಪುಸ್ತಕ ಓದಿದಾದ ಮೇಲೆಯೂ ಇನ್ನೂ ಕಾಡುತ್ತಿದೆ. ಮುಂಬೈ ಹಾಗೂ ಗೋಕರ್ಣದ ರಥಬೀದಿಗಳಲ್ಲಿ ಒಂದು‌ ಸುತ್ತು ಸುತ್ತಿದಂಗಾಯ್ತೂ. ಅವರಿಗೆ ಅವರೇ ಸಾಟಿ.

ಕಾಯ್ಕಿಣಿ ಅವರ ಅಲೆಮಾರಿತನದ ಅನುಭವಗಳು ಸೃಜನಶೀಲ ಬರಹಗಳಾಗಿ ಹೊರ ಹೊಮ್ಮಿವೆ. ಮುಂಬೈ ನಗರದ ಪ್ರೀತಿ, ಗೋಕರ್ಣದೊಂದಿಗಿರುವ ನಂಟು, ಆಪ್ತತೆ ಅವೆಲ್ಲವೂ ಅದರೆಡೆಗಿರುವ ತುಡಿತಗಳಾಗಿ ಹೊರ ಹೊಮ್ಮಿವೆ. ಮುಂಬೈ ಬದುಕನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ, ಶಹರು ಜೀವನದ ಸಾಮಾಜಿಕ ಸೂಕ್ಷ್ಮಗಳು, ತವಕ- ತಲ್ಲಣಗಳು, ನಗರದ ಬದುಕಿನ ಕಥೆಗಳು ಇಲ್ಲಿ ಅಕ್ಷರಗಳಲ್ಲಿ ಅನಾವರಣಗೊಂಡಿವೆ.

ಇಲ್ಲಿ ಮುಂಬೈನ ಆಧುನಿಕತೆಯ ಜೊತೆಗೆ , ರಥಬೀದಿಯ ಕತೆಯನ್ನು ಲೇಖಕರು ದಾಖಲಿಸಿದ್ದಾರೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಅತೀ ಸಣ್ಣ ವಿಷಯಗಳನ್ನಿಟ್ಟುಕೊಂಡು ಅದನ್ನು ಓದುಗರಿಗೆ ದಾಟಿಸಿರುವ ರೀತಿ, ಓದಗನಲ್ಲಿ ಹೊಸ ಆಶಯ,‌ಕಲ್ಪನೆ ,ಹೊಳಹುಗನ್ನು ನೀಡುತ್ತದೆ. ಕಾಯ್ಕಿಣಿ ಇಲ್ಲಿ ಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ.

"ಹನ್ನೊಂದರ ಆಸುಪಾಸು ಹೋಟೆಲುಗಳು ಮುಚ್ಚುತ್ತವೆ. ಸಾವಿರಗಟ್ಟಲೆ ಪಾತ್ರೆ, ಪಗಡಿ ಲೋಟ ತಾಟುಗಳು ಎರಡೂವರೆಯ ತನಕ ತೊಳೆಯಲ್ಪಡುತ್ತವೆ. ಸಿಂಕುಗಳು, ಕನ್ನಡಿಗಳು ವ್ಹಿಮ್ ಹಾಕಿ ಫಳಫಳ ಉಜ್ಜಲ್ಪಡುತ್ತವೆ. ಟೇಬಲುಗಳ ಮೇಲೆ ಬೋರಲು ಖುರ್ಚಿಗಳನ್ನಿಟ್ಟು ಫಿನೈಲ್ ಹಾಕಿ ನೆಲ ತೊಳೆಯಲಾಗುತ್ತದೆ. ಆಗ ಸಿಗುವ ಪುಟಾಣಿ ಚಪ್ಲಿ ಎತ್ತಿ ಎಸೆಯಲಾಗುತ್ತದೆ ಅಥವಾ ಇಡಲಾಗುತ್ತದೆ. ತೊಳೆಯುವ ಚಿಣ್ಣರ ಕಾಲಿಗೆ‌ ಅದು ತುಸುವೇ ಚಿಕ್ಕದಾಗಿದೆ. ತೊಳೆಯುವ ಚಿಣ್ಣರ ಬೆಳ್ಳನೆ ಅಂಗೈಯಲ್ಲಿ ಜಿಡ್ಡು. ಕಣ್ಣಲ್ಲಿ‌ ರಸ್ತೆ ದೀಪದ ಹಳದಿ. ಕಿವಿಯಲ್ಲಿ ಸಪ್ತ ಸಾಗರದಾಚೆಗೆಲ್ಲೋ ಬಿಡ್ತಿಗೆ ತೆಗೆದ ಯಕ್ಷಗಾನದ ಚಂಡೆ. ಮನೆ‌ಬಿಟ್ಟು ನಿಂತ ಸ್ತಬ್ಧ ಕ್ಷಣದಲ್ಲಿ ಓಣಿಯ ಕೊನೆ ಭಾಗದಲ್ಲಿ ತನಕವೂ ಬಣ್ಣದ ಕೈ ಬೀಸುತ್ತಲೇ ಇದ್ದ ಕೇರಿಯ ಗಿಡಮರಗಳು."

ಇಂತಹ ಆಪ್ತವಾದ ಸಾಲುಗಳಿಂದಲೇ ಜಯಂತ ಓದುಗರ ಮನವನ್ನು ತಟ್ಟಿಬಿಡುತ್ತವೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಅಪ್ಪನೆಂಬ ಹೆಗಲು ತಬ್ಬೋ ಜೀವ...!!

ಹಿತ್ತಲು ಎಂಬ ಕಾಡುವ ರೂಪಕ..!!

ಅಪ್ಪಟ ಧಾರವಾಡ ನೆಲದ ಕಾದಂಬರಿ